ಗುರುರಾಜ ಹೊಸಕೋಟೆ (ಮೇ ೨೬. ೧೯೪೮) ಕರ್ನಾಟಕ ಜನಪದ ಗಾಯನ, ರಂಗಭೂಮಿ ಮತ್ತು ಸಿನಿಮಾ ಲೋಕದಲ್ಲಿ ಮಹತ್ವದ ಪ್ರತಿಭೆ. == ಜೀವನ == ಜನಪದ ಕಲಾವಿದರ ವಂಶದಿಂದ ಬಂದ ಗುರುರಾಜ ಹೊಸಕೋಟೆಯವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಮೇ 26, 1948ರಂದು ಜನಿಸಿದರು. ಅವರ ತಂದೆ ರುದ್ರಪ್ಪ ಹೊಸಕೋಟೆಯವರು ಹರಿಕಥಾ ವಿದ್ವಾಂಸರು. ತಾಯಿ ಗೌರಮ್ಮನವರು ಜಾನಪದ ಹಾಡುಗಾರ್ತಿ. ಗುರುರಾಜರು ಓದಿದ್ದು ಪಿ.ಯು.ವರೆಗೆ ಮಾತ್ರ. ಆದರೆ ತಂದೆಯಿಂದ ಬಂದ ಸಂಗೀತ ಬಳುವಳಿಯಿಂದ ಜನಪದ ಹಾಡುಗಾರಿಕೆಯಲ್ಲಿ ಅವರದು ಅಪ್ರತಿಮ ಪರಿಣತಿ. ಅವರು ಶಾಲೆಯಲ್ಲಿದ್ದ ದಿನಗಳಲ್ಲೇ ಜನಪದ ಹಾಡುಗಳನ್ನು ಹಾಡುತ್ತಿದ್ದುದಲ್ಲದೆ, ಹಾಡುಗಳ ರಚನೆಯನ್ನೂ ಪ್ರಾರಂಭಿಸಿದರು. ಇತರ ಶಾಲೆಗಳಿಗೂ ಹೋಗಿ ಜನಪದ ಶೈಲಿಯ ಸಮೂಹ ಗೀತೆಗಳನ್ನು ರಚಿಸಿ ಮಾಡುತ್ತಿದ್ದ ನೃತ್ಯ, ಹಾಡಿನ ಸಂಯೋಜನೆ, ಜನಪದ ಶೈಲಿಯ ಹಾಡುಗಳ ರಚನೆ ಮತ್ತು ಹಾಡುಗಾರಿಕೆಯಿಂದ ಅಪಾರ ಪ್ರಸಿದ್ಧಿ ಗಳಿಸಿದರು. ಕರ್ನಾಟಕದ ಹೆಸರಾಂತ ಧ್ವನಿಸುರುಳಿ ಕಂಪನಿಗಳಿಗೆ ಅವರು ಬರೆದ ಗೀತೆಗಳು ಸಾವಿರಾರು. 1969ರಲ್ಲಿ ರಬಕವಿಯಲ್ಲಿ ನಡೆದ ಗಣೇಶೋತ್ಸವದಲ್ಲಿ ಗುರುರಾಜ ಹೊಸಕೋಟೆಯವರ ಪ್ರಥಮ ಕಾರ್ಯಕ್ರಮ ನಡೆಯಿತು. ಅಲ್ಲಿಂದ ಮುಂದೆ ನಡೆದ ಅವರ ಕಾರ್ಯಕ್ರಮಗಳು ಸಹಸ್ರಾರು. ಅವರು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಕಾರ್ಯಕ್ರಮಗಳು ನಡೆಸಿಕೊಟ್ಟರಲ್ಲದೆ, ಹೊರರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರದಲ್ಲೂ ಕಾರ್ಯಕ್ರಮಗಳನ್ನು ನಡೆಸಿದರು. == ಸಂಗೀತ ಲೋಕದಲ್ಲಿ == ೧೯೬೯ಲ್ಲಿ ರಬಕವಿಯಲ್ಲಿ ನಡೆದ ಗಣೇಶೋತ್ಸವದಲ್ಲಿ ಗುರುರಾಜ ಹೊಸಕೋಟೆಯವರ ಪ್ರಥಮ ಕಾರ್ಯಕ್ರಮ ನಡೆಯಿತು. ಅಲ್ಲಿಂದ ಮುಂದೆ ನಡೆದ ಅವರ ಕಾರ್ಯಕ್ರಮಗಳು ಸಹಸ್ರಾರು. ಅವರು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಕಾರ್ಯಕ್ರಮಗಳು ನಡೆಸಿಕೊಟ್ಟರಲ್ಲದೆ, ಹೊರರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರದಲ್ಲೂ ಕಾರ್ಯಕ್ರಮಗಳನ್ನು ನಡೆಸಿದರು. == ಕವಿ ಮತ್ತು ನಾಟಕಕಾರ == ಸ್ನೇಹಜೀವಿ, ಕೈಬೀಸಿ ಕರೆವಾ, ಉತ್ತರ ಕರ್ನಾಟಕದ ಜನಪ್ರಿಯ ಹಾಡುಗಳು ಮುಂತಾದವು ಗುರುರಾಜ ಹೊಸಕೋಟೆಯವರ ಪ್ರಸಿದ್ಧ ಕವನ ಸಂಕಲನಗಳು. ಸೊಕ್ಕುತಂದ ಸೋಲು, ಸುಮ್‌ ಸುಮ್ನೆ, ಅದೇನ್ ಹೇಳ್ರೀ, ಹೇಳಕಾಗಲ್ಲ ಎಂಬ ನಾಟಕಗಳನ್ನು ಬರೆದು ನೂರಾರು ಬಾರಿ ರಂಗ ಪ್ರಯೋಗ ಕಾಣುವಂತೆ ಮಾಡಿದರು. == ಸಿನಿಮಾ ಲೋಕದಲ್ಲಿ == ಸಿನಿಮಾದ ಹುಚ್ಚಿನಿಂದ ಗುರುರಾಜ ಹೊಸಕೋಟೆ ಅವರು ಬೆಂಗಳೂರಿಗೆ ಬಂದು ನಿರ್ದೇಶಿಸಿದ್ದು ‘ಅಲ್ಲೇ ಇರುವುದು ನೋಡಿ’ ಎಂಬ ಚಿತ್ರ. ಇವರ ಜಾಯಮಾನಕ್ಕೆ ಇದು ಒಗ್ಗಲಿಲ್ಲ. ಮುಂದೆ ಸಂಗ್ಯಾಬಾಳ್ಯ, ತವರಿನ ತೊಟ್ಟಿಲು, ಮಹಾಕ್ಷತ್ರಿಯ, ಕರಿಯ, ದಾಸ, ಜೋಗಿ, ತನನಂ ತನನಂ, ಸುಂಟರಗಾಳಿ, ಅಶೋಕ, ರಾಮ ಭಾಮ, ಶಾಮ, ಅಂಬಿ, ಶಂಭು ಮುಂತಾದ ಸುಮಾರು ಐವತ್ತು ಚಲನಚಿತ್ರಗಳಲ್ಲಿ ಅವರಿಗೆ ಹಾಡುವ ಅವಕಾಶ ದೊರಕಿತು. ಓ ಗುಲಾಬಿ, ಒಡ ಹುಟ್ಟಿದವರು, ಅಗ್ರಹಾರ ಮುಂತಾದ ಹತ್ತಾರು ಚಿತ್ರಗಳಲ್ಲಿ ಅವರಿಗೆ ಗೀತ ರಚನೆಯ ಅವಕಾಶ ದೊರಕಿತು. ಕೆಲವು ಚಿತ್ರಗಳಲ್ಲಿ ನಟರಾಗಿಯೂ ಅವರು ಪಡೆದ ಪ್ರಸಿದ್ಧಿ ಪಡೆದರು. == ಪ್ರಶಸ್ತಿ ಗೌರವಗಳು == ೧೯೮೩-೧೯೮೫ ಅವಧಿಯಲ್ಲಿ ಅವರು ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ಜಾನಪದ ಗಾನ ಸರಿ, ಜಾನಪದ ಕಲಾನಿಧಿ, ಜಾನಪದ ಕಲಾಕೌಸ್ತುಭ, ಜಾನಪದ ಕೋಗಿಲೆ, ಜಾನಪದ ಸಾರ್ವಭೌಮ, ಜಾನಪದ ನಿಧಿ ಮುಂತಾದ ಹಲವಾರು ಬಿರುದು ಗೌರವಗಳು ಗುರುರಾಜ ಹೊಸಕೋಟೆ ಅವರಿಗೆ ಸಂದಿದ್ದವು.